ಶ್ರೀ ವೆಂಕಟೇಶ್ವರ ಸ್ವಾಮಿಯ ಸನ್ನಿಧಾನ ತಿರುಪತಿಯಲ್ಲಿ ನೀಡುವ ಲಡ್ಡುವಿನ ತೂಕದಲ್ಲಿ ಭಾರೀ ವ್ಯತ್ಯಾಸವಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿ ಹರಿದಾಡ್ತಿದೆ.
ಈ ವಿಡಿಯೋದಲ್ಲಿ ಹೇಳಿರುವಂತೆ ಲಡ್ಡುವಿನ ಮೂಲ ತೂಕಕ್ಕೆ ವ್ಯತಿರಿಕ್ತವಾಗಿ ಕಡಿಮೆ ತೂಕದ ಲಡ್ಡು ನೀಡುತ್ತಿದ್ದಾರೆಂಬ ಆರೋಪವನ್ನು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಅಧಿಕಾರಿಗಳು ನಿರಾಕರಿಸಿದ್ದಾರೆ.
ತಿರುಪತಿಯ ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನದ ಲಡ್ಡು ಪ್ರಸಾದದ ಗಾತ್ರ ಮತ್ತು ತೂಕದಲ್ಲಿ ಬದಲಾವಣೆಯಾಗಿದೆ ಎಂಬ ಆರೋಪವನ್ನು ಟಿಟಿಡಿ(ತಿರುಮಲ ತಿರುಪತಿ ದೇವಸ್ಥಾನಮ್ಸ್) ತಳ್ಳಿಹಾಕಿದೆ.
ಅಲ್ಲದೇ, ಸುಳ್ಳು ಸುದ್ದಿಯನ್ನು ಯಾವುದೇ ಕಾರಣಕ್ಕೂ ನಂಬದಿರಿ ಎಂದು ಭಕ್ತಾದಿಗಳಿಗೆ ಮನವಿ ಮಾಡಿದೆ. ದೇಗುಲದ ಅಡುಗೆ ಮನೆ “ಪೋಟು’ವಿನಲ್ಲಿ ಪ್ರತಿದಿನ ತಯಾರಾಗುವ ಲಡ್ಡುಗಳನ್ನು ಪ್ರತ್ಯೇಕ ಟ್ರೇಯಲ್ಲಿ ಇಟ್ಟು, ಅದರ ತೂಕವನ್ನು ಅಳೆಯಲಾಗುತ್ತದೆ. ಇಲ್ಲಿನ ಎಲ್ಲ ಪ್ರಕ್ರಿಯೆಯೂ ಪಾರದರ್ಶಕವಾಗಿದೆ.
ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ ಎಂದು ಟಿಟಿಡಿ ಹೇಳಿದೆ. ಶ್ರೀವರಿ ಲಡ್ಡು ಪ್ರಸಾದದ ತೂಕವು ನಿಗದಿಗಿಂತ ಕಡಿಮೆಯಿದೆ ಎಂಬ ವಿಡಿಯೋವೊಂದು ಹರಿದಾಡಿದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ.
ವೀಡಿಯೋ ಪ್ರಕಾರ, ಸುನಿಲ್ ಕುಮಾರ್ ಎಂಬ ಭಕ್ತರು ತಿರುಮಲದಲ್ಲಿ ಪ್ರಧಾನ ದೇವರ ದರ್ಶನ ಪಡೆದ ನಂತರ ಲಡ್ಡು ಕೌಂಟರ್ಗೆ ಹೋಗಿ ಲಡ್ಡುವನ್ನು ಪಡೆದಿದ್ದಾರೆ.
ಲಡ್ಡು ತೂಕದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ವಲ್ಪ ಸಮಯದಲ್ಲೇ ಕೌಂಟರ್ಗೆ ಹೋಗಿ ತೂಕದ ಯಂತ್ರಕ್ಕೆ ಪವಿತ್ರ ಪ್ರಸಾದವನ್ನು ಹಾಕಿ ಪರೀಕ್ಷಿಸಿದ್ದಾರೆ. ಯಂತ್ರವು 98 ಗ್ರಾಂನಿಂದ 108 ಗ್ರಾಂಗಳ ನಡುವೆ ಲಡ್ಡುವಿನ ತೂಕವನ್ನು ತೋರಿಸಿದೆ. ಆದರೆ ಪ್ರತಿ ಲಡ್ಡುವಿನ ನಿಜವಾದ ತೂಕವು 165 ಗ್ರಾಂನಿಂದ 180 ಗ್ರಾಂ ನಡುವೆ ತೂಕವಿರಬೇಕು.
ಅವರು ತಕ್ಷಣ ತಮ್ಮ ಮೊಬೈಲ್ ನಲ್ಲಿ ಸಂಪೂರ್ಣ ಘಟನೆಯನ್ನು ಸೆರೆಹಿಡಿದು ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು ಅದು ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ.
ವಿಷಯವು ಸಂಬಂಧಪಟ್ಟ ಟಿಟಿಡಿ ಅಧಿಕಾರಿಗಳ ಗಮನಕ್ಕೆ ಬಂದಿದ್ದರಿಂದ, ಅವರು ಆಂತರಿಕ ತನಿಖೆ ನಡೆಸಿದ್ದು ಕರ್ತವ್ಯದಲ್ಲಿದ್ದ ಸಿಬ್ಬಂದಿಯಿಂದ ಯಾವುದೇ ತಪ್ಪು ಕಂಡುಬಂದಿಲ್ಲ.
ತನಿಖೆಯಲ್ಲಿ ತೂಕದ ಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿದೆ. ತೂಕದ ಯಂತ್ರದಲ್ಲಿನ ತಾಂತ್ರಿಕ ದೋಷದ ಬಗ್ಗೆ ಗುತ್ತಿಗೆ ಸಿಬ್ಬಂದಿಗೆ ತಿಳಿದಿಲ್ಲದ ಕಾರಣ ಈ ಘಟನೆ ನಡೆದಿದೆ ಎಂದು ಟಿಟಿಡಿ ಅಧಿಕಾರಿಗಳು ಹೇಳಿದ್ದಾರೆ. ಪ್ರಪಂಚದಾದ್ಯಂತದ ಬಾಲಾಜಿ ದೇವರ ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಕಳಂಕ ತರುವ ಕೆಟ್ಟ ಉದ್ದೇಶದಿಂದ ಇಂತಹ ಪೋಸ್ಟ್ಗಳನ್ನು ನಂಬಬೇಡಿ ಎಂದಿದ್ದಾರೆ.