ರಾಜ್ಯ ಸರ್ಕಾರ ನಡೆಸಿದ್ದ ಗಣತಿ ವರದಿ ಈಗಾಗಲೇ ವಿರೋಧಕ್ಕೆ ಕಾರಣವಾಗಿದೆ. ಅಷ್ಟೆ ಅಲ್ಲ ಈ ವರದಿ ಅನುಷ್ಠಾನ ಆದರೆ ಸರ್ಕಾರವೇ ಬುಡಮೇಲು ಆಗುತ್ತಾ ಅನ್ನೋ ಚರ್ಚೆ ಕೂಡ ಇದೆ. ಯಾಕಂದ್ರೆ ಇದೊಂದು ಅವೈಜ್ಞಾನಿಕ ವರದಿ, ಈ ವರದಿ ಸರಿಯಿಲ್ಲ, ಯಾರ ಮನೆಗೂ ಹೋಗಿ ಈ ವರದಿ ತಯಾರಿಸಿಲ್ಲ, ಸಿಎಂ ಕಚೇರಿಯಲ್ಲಿ ಕುಳಿತು ವರದಿ ತಯಾರಾಗಿದೆ ಅನ್ನೋದು ಪ್ರಬಲ ಸಮುದಾಯಗಳ ವಾದ. ಇತ್ತ ಹಿಂದುಳಿದ ಸಮುದಾಯಗಳ ಕೆಲವು ಪ್ರವರ್ಗಗಳೂ ಕೂಸ ಇದಕ್ಕೆ ಇತ್ತೀಚೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲದರ ಮಧ್ಯೆ ಕೇಂದ್ರ ಸರ್ಕಾರ ಮಹತ್ವದ ಘೋಷಣೆಯೊಂದನ್ನ ಮಾಡಿದೆ.
ಹೌದು, ರಾಜ್ಯದ ಜಾತಿ ಗಣತಿಯ ವರದಿ ಕಸದ ಪುಟ್ಟಿಗೆ ಹಾಕುವ ಕಾಲ ಹತ್ತಿರವಿದೆ ಅನ್ನೋದು ರಾಜಕೀಯ ಪಡಸಾಲೆಯಲ್ಲಿ ಶುರುವಾಗಿರೋ ಚರ್ಚೆ. ಯಾಕಂದ್ರೆ ಕೇಂದ್ರ ಸರ್ಕಾರವೇ ಜಾತಿ ಹಾಗೂ ಜನ ಗಣತಿಗೆ ಮುಂದಾಗ್ತಾ ಇರೋದು. ಕೇಂದ್ರ ಸರ್ಕಾರ ಜಾತಿಜನಗಣತಿ ಸಮೀಕ್ಷೆ ಮಾಡೋದಾಗಿ ಘೋಷಣೆ ಮಾಡ್ತಿದೆ. ಕೇಂದ್ರದ ಈ ನಿರ್ಧಾರವನ್ನೇನೋ ಕಾಂಗ್ರೆಸ್ ನಾಯಕರು ಒಪ್ಪಿದಂಗಿದೆ. ಆದರೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಕ್ರೆಡಿಟ್ ವಾರ್ ಶುರುವಾಗಿದೆ.

ರಾಜ್ಯ ಸರ್ಕಾರ ನಡೆಸಿದ್ದ ಕಾಂತರಾಜು ಸಮೀಕ್ಷೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು ಬಿಜೆಪಿಗರು. ಈ ವರದಿ ಸರಿಯಿಲ್ಲ ಎಂದಿದ್ದರು. ಆದರೆ ಈಗ ಕೇಂದ್ರ ಸರ್ಕಾರದ ನಿರ್ಧಾರವನ್ನ ಸ್ವಾಗತಿಸ್ತಿದ್ದಾರೆ. ಇತ್ತ ಜಾತಿಜನಗಣತಿ ಸಮೀಕ್ಷೆಗೆ ಬೀಜ ಬಿತ್ತಿದ್ದೇ ಕಾಂಗ್ರೆಸ್ ಪಕ್ಷ ಅಂತಾ ಕೈ ನಾಯಕರು ಕ್ರೆಡಿಟ್ ನಮಗೆ ಸೇರಿಬೇಕು ಅಂತ ಹೇಳ್ತಾ ಇದ್ದಾರೆ.
1931 ರಲ್ಲಿ ಬ್ರಿಟೀಷರು ಜಾತಿಜನಗಣತಿ ನಡೆಸಿದ್ರು. ಅಲ್ಲಿಂದ ಇಲ್ಲಿಯವರೆಗೆ ಗಣತಿ ಕೇಂದ್ರದಿಂದ ನಡೆದಿರಲಿಲ್ಲ. 94 ವರ್ಷಗಳ ಬಳಿಕ ಜಾತಿಜನಗಣತಿ ಸಮೀಕ್ಷೆ ನಡೆಸಲು ಮೋದಿ ಸರ್ಕಾರ ನಿರ್ಧಾರ ಮಾಡಿದೆ. ಇಷ್ಟು ವರ್ಷಗಳ ಬಳಿಕ ಈ ಗಣತಿ ನಡೆಯುತ್ತಿದೆ. ಕೇಂದ್ರ ಸರ್ಕಾರದ ಸಮೀಕ್ಷೆಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ನಡೆಸಿರೋ ಕಾಂತರಾಜು ಆಯೋಗದ ವರದಿ ಮಹತ್ವ ಕಳೆದುಕೊಳ್ಳೋದಂತೂ ಗ್ಯಾರಂಟಿ. ಕೇಂದ್ರದಿಂದ ಮಾಡುವ ಜಾತಿಜನಗಣತಿ ಹಿನ್ನೆಲೆ ಕಾಂತರಾಜು ವರದಿಗೆ ಬೆಲೆ ಇಲ್ಲ ಅನ್ನೋದಂತೂ ಸುಳ್ಳಲ್ಲ.
ಇದೆಲ್ಲದರ ಮಧ್ಯೆ ಈಗ ಜಾತಿಜನಗಣತಿ ವಿಚಾರದಲ್ಲಿ ಕಾಂಗ್ರೆಸ್ – ಬಿಜೆಪಿ ನಾಯಕರ ನಡುವೆ ಕ್ರೆಡಿಟ್ ವಾರ್ ಶುರುವಾಗಿದೆ. ಜಾತಿಜನಗಣತಿಯನ್ನ ಬಿಜೆಪಿ ನಾಯಕರು ವಿರೋಧಿಸಿದ್ದರು. ಈಗ ನಮ್ಮ ಆಗ್ರಹ ಒಪ್ಪಿದ್ದಾರೆ ಅಂತಾ ರಾಹುಲ್ ಗಾಂಧಿ ಹೇಳಿದ್ದಾರೆ. ಜಾತಿಜನಗಣತಿ ನಡೆಸುವಂತೆ ಏಪ್ರಿಲ್ 16 ರಂದು ಮೋದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ರು. ಕಾಂಗ್ರೆಸ್ ಒತ್ತಾಯಕ್ಕೆ ಕೇಂದ್ರ ಸರ್ಕಾರ ಮಣಿದಿದೆ ಅಂತಾ ಕೈ ನಾಯಕರು ಹೇಳುತ್ತಿದ್ದು, ಕೇಂದ್ರ ನಾಯಕರಲ್ಲೇ ಗಣತಿಯ ಕ್ರೆಡಿಟ್ ವಾರ್ ಜೋರಾಗಿ ನಡೀತಾ ಇದೆ.
ರಾಜ್ಯ ಸರ್ಕಾರದ ಜಾತಿಜನಗಣತಿ ವಿರುದ್ದ ಬಿಜೆಪಿ, ಜೆಡಿಎಸ್ ನಾಯಕರು ಕೂಡ ಆಕ್ರೋಶ ಹೊರಹಾಕಿದ್ದರು. ವಿಪಕ್ಷ ನಾಯಕ ಆರ್ ಅಶೋಕ್, ಮಾಜಿ ಸಿಎಂ ಬೊಮ್ಮಾಯಿ, ಯಡಿಯೂರಪ್ಪ, ವಿಜಯೇಂದ್ರ ಹಾದಿಯಾಗಿ ಎಲ್ಲಾ ನಾಯಕರು ತೀವ್ರ ಆಕ್ಷೇಪ ಎತ್ತಿದ್ರು. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕೂಡ ಭಾರೀ ವಿರೋಧ ವ್ಯಕ್ತಪಡಿಸಿದ್ರು. ಆದರೆ ಇದೀಗ ಕೇಂದ್ರದ ನಿರ್ಧಾರವನ್ನು ಸ್ವಾಗತ ಮಾಡಿದ್ದಾರೆ.ಈ ಬಗ್ಗೆ ಮಾತನಾಡಿರುವ ಅವರು, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಸಮೀಕ್ಷೆ ನಡೆಸಬೇಕು. ಆಗ ಮಾತ್ರ ಸಾಮಾಜಿಕ ನ್ಯಾಯ ಒದಗಿಸಬಹುದು ಅಂತಾ ಆಗ್ರಹಿಸಿದ್ರು.
ಒಟ್ನಲ್ಲಿ ಬಿಹಾರದ ಚುನಾವಣೆ ಸಮೀಪಿಸುತ್ತಿರುವಾಗಲೇ ಕೇಂದ್ರ ಸರ್ಕಾರ ಜನ ಗಣತಿಯೊಂದಿಗೆ ಜಾತಿ ಗಣತಿಯನ್ನೂ ಮಾಡುವುದಾಗಿ ಘೋಷಿಸಿದೆ. ಈ ಬೆನ್ನಲ್ಲೇ ಜಾತಿ ಗಣತಿ ಮಾಡಿಸುತ್ತೇವೆ ಅನ್ನೋದು ಒಂದು ಲೆಕ್ಕಾಚಾರವಾದರೂ, ಇದರ ರಾಜಕೀಯ ಲಾಭ ಪಡೆದುಕೊಳ್ಳಲು ಬಿಜೆಪಿ, ಕಾಂಗ್ರೆಸ್ ನಾಯಕರು ಕಸರತ್ತು ನಡೆಸ್ತಿರೋದಂತೂ ಸತ್ಯ.



