ಈ ವರ್ಷ ಸಾವಿರಾರು ಮರಗಳು ಭಸ್ಮ: ವನ್ಯಜೀವಿ ಸಂಕುಲ ವಿಲವಿಲ
ಬೆಂಗಳೂರು: ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅನೇಕ ಬೆಟ್ಟ ಗುಡ್ಡಗಳಲ್ಲಿ ಬೆಂಕಿ ಅನಾಹುತಗಳು ಹೆಚ್ಚುತ್ತಿದ್ದು ಕಾಡಿನೊಳಗೆ ಇರುವ ಪ್ರಾಣಿ. ಪಕ್ಷಿ, ಜೀವ ವೈವಿಧ್ಯ ಸಂಕುಲ, ಪ್ರಾಕೃತಿಕ ಸಂಪನ್ಮೂಲಗಳು ಮತ್ತು ಮರಗಳು ಬೆಂಕಿಗೆ ಹಾನಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಇನ್ನೊಂದೆಡೆ ಕಿಡಿಗೇಡಿಗಳ ಕೃತ್ಯದಿಂದಾಗಿ ಬೆಟ್ಟ-ಗುಡ್ಡಗಳಲ್ಲಿ ಹೆಚ್ಚುತ್ತಿರುವ ಬೆಂಕಿ ದುರ್ಘಟನೆಗಳ ಬಗ್ಗೆ ವಿಶೇಷ ತನಿಖೆ ಮಾಡಬೇಕು ಮತ್ತು ಅನಾಹುತ ತಡೆಯುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲತೇಶ್ ಅರಸ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಮೇ ತಿಂಗಳಿನಲ್ಲಿ ದಿನೆದಿನೇ ಬಿಸಿಲಿನ ತಾಪಮಾನ ಹೆಚ್ಚಿದ್ದು ಹಲವಾರು ಪ್ರಾಣಿ ಪಕ್ಷಿಗಳಿಗೆ ತಿನ್ನಲು ಆಹಾರ, ನೀರು ಇಲ್ಲದಂತಾಗಿರುವ ಈ ಸಂದರ್ಭದಲ್ಲಿ ಗುಡ್ಡಕ್ಕೆ ಬೆಂಕಿ ತಗುಲುವುದರಿಂದ ಪಕ್ಷಿಗಳಿಗೆ ಸರಿಸೃಪಗಳಿಗೆ ಗುಡ್ಡದಲ್ಲಿರುವ ಆಹಾರವಾಗಿರುವ ಲಕ್ಷಾಂತರ ಕೀಟಗಳು ಸತ್ತು ಹೋಗುವ ಪರಿಣಾಮ ಹಲವಾರು ಪ್ರಾಣಿಗಳಿಗೆ ಆಹಾರದ ಕೊರತೆ ಉಂಟಾಗುತ್ತದೆ ಎಂದಿದ್ದಾರೆ.
ಬೇಸಿಗೆ ಬಂತೆಂದರೆ ಕಾಡಿನ ಬೆಂಕಿ ಪ್ರಮಾಣ ಅಧಿಕವಾಗುತ್ತಾ ಹೋಗುತ್ತದೆ. ಒಣಗಿ ಮಳೆಗೆ ಕಾದು ನಿಂತ ಮುಗಿಲೆತ್ತರದ ಮರಗಳು, ಕುರುಚಲು ಅರಣ್ಯ ಪ್ರದೇಶಗಳು ಬೆಂಕಿಗೆ ಆಹುತಿಯಾಗುತ್ತವೆ. ಅಷ್ಟೇ ಅಲ್ಲ ಅರಣ್ಯವನ್ನು ಉಳಿಸುವ ಪ್ರಾಣಿಗಳಿಂದ ಹಿಡಿದು ಸಣ್ಣ ಸಣ್ಣ ಪ್ರಾಣಿ, ಪಕ್ಷಿಗಳು ಕಾಡಿನ ಬೆಂಕಿಯಲ್ಲಿ ಸುಟ್ಟು ಕರಕಲಾಗುತ್ತವೆ. ಅದೆಷ್ಟೋ ಸೂಕ್ತ ಜೀವಿಗಳು ಅಳಿದು ಹೋಗುತ್ತವೆ. ಮರ, ಗಿಡಗಳ ಲೆಕ್ಕವೇ ಇಲ್ಲ ಎಲ್ಲವೂ ಸುಟ್ಟು ಹೋಗುತ್ತದೆ.

ಬೆಂಕಿ ಹಚ್ಚಿರುವ ಕೆಲವು ಗುಡ್ಡಗಳಲ್ಲಿ ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನ ಮತ್ತು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ತಂಡದೊಂದಿಗೆ ಅದರ ವೀಕ್ಷಣೆ ಮಾಡಿ ಮತ್ತು ಅಪಾಯದ ಹಿನ್ನೆಲೆಯನ್ನ ಅಧ್ಯಯನ ಮಾಡುವ ಕೆಲಸವನ್ನು ಮಾಡಿ ಬೆಂಕಿ ದುರಂತದ ತಡೆ ಬಗ್ಗೆ ಚರ್ಚೆ ಮಾಡಲಾಗಿದ್ದು, ಇದೀಗ ಅದನ್ನು ತಡೆಯಲು ವಿವಿಧ ಬೋಳು ಬೆಟ್ಟ ಗುಡ್ಡಗಳನ್ನು ಹಸಿರುವನ ವನ್ನಾಗಿ ಮಾಡಲು ಸನ್ನದ್ದವಾಗಿದೆ. ಜೊತೆಗೆ ಅರಣ್ಯ ಇಲಾಖೆಯ ಜೊತೆ ನಮ್ಮ ಗುರುಕುಲ ಹಸಿರು ರಾಯಭಾರಿಗಳ ತಂಡ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಜೊತೆಯಲ್ಲಿ ಇರಲಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲತೇಶ್ ಅರಸ್, ರಾಜ್ಯ ಸಂಚಾಲಕರಾದ ಟಿ.ರುದ್ರಮುನಿ, ಜಲ ಜಾಗೃತಿ ವಿಭಾಗದ ಉಪಾಧ್ಯಕ್ಷರಾದ ಕೆ. ಓಂಕಾರಪ್ಪ ಮನವಿ ಮಾಡಿದ್ದಾರೆ.



