ಡಾ.ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ೫೦ ವರ್ಷಗಳಾದ ಹಿನ್ನಲೆಯಲ್ಲಿ ಅವರ ೫೦ ಸೇನಾನಿಗಳು ಡಾ.ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ ಅವರ ನೇತೃತ್ವದಲ್ಲಿ ೨೦೨೨ ರ ಸೆಪ್ಟೆಂಬರ್ ೧೮ ರಂದು ಬೆಂಗಳೂರಿನ ಡಾ.ವಿಷ್ಣು ಪುಣ್ಯಭೂಮಿಯಲ್ಲಿ ೫೧ ಬೃಹತ್ ಕಟೌಟ್ಗಳನ್ನು ಸ್ಥಾಪಿಸಿ “ಕಟೌಟ್ ಜಾತ್ರೆ” ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆ ಕಟೌಟ್ಗಳಿಗೆ ಬೃಹತ್ ಹಾರಗಳನ್ನು ಸಹ ಹಾಕಿಸಿದ್ದರು. ಇಡೀ ಕಾರ್ಯಕ್ರಮಕ್ಕೆ ಅಂದಾಜು ೪೦ ಲಕ್ಷದಷ್ಟು ಹಣ ಖರ್ಚಾಗಿತ್ತು. ಪೊಲೀಸ್ ಇಲಾಖೆಯ ಪ್ರಕಾರ ಎರಡೂವರೆ ಲಕ್ಷ ಕನ್ನಡಿಗರು ಈ ಕಟೌಟ್ ಜಾತ್ರೆಯಲ್ಲಿ ಭಾಗವಹಿಸಿದ್ದರು.

ಅಂದೇ ಈ ಕಟೌಟ್ ಜಾತ್ರೆಯನ್ನು ಏಷ್ಯಾ ಬುಕ್ ಆಫ್ ರೆಕಾರ್ಡ್ ಮತ್ತು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಿಸಲು ಮನವಿಯನ್ನು ಸಲ್ಲಿಸಲಾಗಿತ್ತು. ಆ ಸಂಸ್ಥೆಗಳು ನಮ್ಮ ದಾಖಲೆ ಸಂಬಂಧ ಅನೇಕ ಹಂತದ ಪರೀಕ್ಷೆಗಳನ್ನು ನಡೆಸಿದರಲ್ಲದೆ, ಖುದ್ದಾಗಿ ಸ್ಥಳ ಪರಿಶೀಲನೆಯನ್ನು ಸಹ ಮಾಡಿದ್ದರು. ಇದೀಗ ಆ ಎಲ್ಲಾ ಹಂತದ ಪರೀಕ್ಷೆಗಳೂ ಮುಗಿದಿದ್ದು, ಈ ಕಟೌಟ್ ಜಾತ್ರೆಯು ಏಷ್ಯಾ ಬುಕ್ ಆಫ್ ರೆಕಾರ್ಡ್ ಮತ್ತು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆಯಾಗಿ ದಾಖಲೆಯಾಗಿದೆ. ಆ ಎರಡೂ ದಾಖಲೆಗಳ ಸರ್ಟಿಫಿಕೇಟ್ ಮತ್ತು ಪದಕಗಳು ಇಂದು ನಮಗೆ ತಲುಪಿದವು.
ತೆರೆಮುಂದೆ ತೆರೆಹಿಂದೆ ನುಡಿದಂತೆ ನಡೆದ ಮೇರುನಟನ ಹೆಸರಲ್ಲಿ ಇಂತಹದ್ದೊಂದು ದಾಖಲೆಯನ್ನು ಅವರಿಲ್ಲದ ಹೊತ್ತಿನಲ್ಲಿ ಸ್ಥಾಪಿಸಲು ಸಾಧ್ಯವಾಗಿದ್ದಕ್ಕೆ ನಿಜಕ್ಕೂ ಹೆಮ್ಮೆಪಡುತ್ತೇವೆ. ಈ ದಾಖಲೆಯು ಡಾ.ವಿಷ್ಣುವರ್ಧನ್ ಅವರ ಅಗಲಿಕೆಯ ೧೩ ವರ್ಷಗಳ ನಂತರವೂ ಅವರ ನೆನಪನ್ನು ಹಸಿರಾಗಿಡುವ ಕೆಲಸವನ್ನು ಅವರ ಅಭಿಮಾನಿಗಳು ನಿರಂತರವಾಗಿ ಮಾಡುತ್ತಿರುವುದರ ದ್ಯೋತಕವಾಗಿದೆ. ಈ ಕಟೌಟ್ ಜಾತ್ರೆಗೆ ಬೆನ್ನೆಲುಬಾಗಿ ನಿಂತ ೫೦ ಸೇನಾನಿಗಳಿಗೆ, ಯೋಜನೆ ಕಾರ್ಯಸಾಧುಗೊಳಿಸಿದ ಆನಂದ್ ರಾಚ್, ಕಟೌಟ್ ವಿನ್ಯಾಸ ಮಾಡಿದ ರಾಜುವಿಷ್ಣು ಮತ್ತು ಈ ಸಂಸ್ಥೆಗಳ ಜೊತೆ ಸಂವಹನ ನಡೆಸಿ, ಸಾಧ್ಯವಾಗಿಸಿದ ಸಾಹಿತಿ ಜನಾರ್ಧನ್ ರಾವ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಲು ಇಚ್ಚಿಸುತ್ತೇನೆ.
-ವೀರಕಪುತ್ರ ಶ್ರೀನಿವಾಸ