ಹಿಂದೂ ಧರ್ಮದಲ್ಲಿ ಯಾವುದೇ ಪೂಜೆ ಅಥವಾ ಕಾರ್ಯಕ್ರಮಗಳು ನಡೆಯುವುದಿದ್ದರೂ ಮೊದಲ ಪೂಜೆ ಸಲ್ಲಬೇಕಾಗಿರುವುದು ಗಣಪತಿ ದೇವರಿಗೆ. ಪ್ರತೀ ತಿಂಗಳಲ್ಲಿ ಒಂದು ದಿನ ಗಣಪತಿಯನ್ನು ಸಂಕಷ್ಟ ಚತುರ್ಥಿ ಅಥವಾ ಸಂಕಟ ಚೌತಿಯ ದಿನ ಪೂಜಿಸಲಾಗುತ್ತದೆ. ಈ ದಿನವು ತುಂಬಾ ಪವಿತ್ರವಾಗಿದೆ. ಅದರಲ್ಲೂ ಇದು ಮಂಗಳವಾರ ಮತ್ತು ಶುಕ್ರವಾರದಂದು ಬಂದರೆ ತುಂಬಾ ಪವಿತ್ರವಾಗಿರುವುದು.
ಹಿಂದೂ ಪಂಚಾಂಗದ ಪ್ರಕಾರ ಪ್ರತೀ ತಿಂಗಳ ನಾಲ್ಕನೇ ದಿನವನ್ನು ಚತುರ್ಥಿ ಎಂದು ಕರೆಯಲಾಗುತ್ತದೆ. ಇದನ್ನು ಭಾರತದೆಲ್ಲೆಡೆಯಲ್ಲಿ ಸಂಕಷ್ಟಿ ಚತುರ್ಥಿ ಎಂದು ಆಚರಿಸಲಾಗುವುದು. ಸಂಸ್ಕೃತದಲ್ಲಿ ಸಂಕಷ್ಟಿ’ಎಂದರೆ ಎಲ್ಲಾ ಸಮಸ್ಯೆಗಳು ಅಥವಾ ಕಠಿಣ ಸಮಯದಿಂದ ಮುಕ್ತಿ ಪಡೆಯುವುದು. ಈ ದಿನದಂದು ಗಣೇಶನನ್ನು ಪೂಜಿಸಿದರೆ ಆಗ ನಿಮಗೆ ಜೀವನದಲ್ಲೂ ಸುಖ ಹಾಗೂ ಸಮೃದ್ಧಿ ಸಿಗುವುದು. ತಮ್ಮ ಸಮಸ್ಯೆಗಳಿಂದ ಮುಕ್ತಿ ನೀಡಲು ಈ ದಿನದಂದು ಜನರು ಉಪವಾಸ ವ್ರತ ಮಾಡುವರು.ಸಂಕಷ್ಟ ಚತುದರ್ಶಿಯು ತುಂಬಾ ಪವಿತ್ರ ಪೂಜೆಯಾಗಿದೆ. ಈ ಪೂಜೆಯನ್ನು ಕುಟುಂಬದ ಸುಖ, ಸಮೃದ್ಧಿಗಾಗಿ ಮಾಡಲಾಗುತ್ತದೆ.

ಮಂಗಳವಾರ ಚತುರ್ಥಿ ಬಂದರೆ ಅದಕ್ಕೆ ಅಂಗಾರಕ ಎನ್ನುತ್ತಾರೆ. ಅಂಗಾರ ಎಂದರೆ ಮಂಗಳಗ್ರಹ ಅಥವಾ ಭೂಮಿ. ಗಣಪತಿಯ ಅಧಿಪತ್ಯವು ಪೃಥ್ವಿಯ ಮೇಲೆ ಇರುವಂತೆ ಮಂಗಳ ಗ್ರಹದ ಮೇಲೂ ಇದೆ. ಗಣಪತಿ ಮತ್ತು ಮಂಗಳ ಗ್ರಹದ ಬಣ್ಣವೂ ಒಂದೇ ಆಗಿದೆ. ಅಂಗಾರಕದ ದಿನ ಪೃಥ್ವಿಯ ಮೇಲೆ ಗಣೇಶನ ಸ್ಪಂದನಗಳು ಹೆಚ್ಚು ಪ್ರಮಾಣದಲ್ಲಿ ಬರುತ್ತವೆ. ಹಾಗೆಯೇ ಮಂಗಳ ಗ್ರಹದಿಂದಲೂ ಗಣೇಶನ ಸ್ಪಂದನಗಳು ಪೃಥ್ವಿಯ ಮೇಲೆ ಬರುತ್ತವೆ. ಇದರಿಂದಾಗಿ ಚಂದ್ರನಿಂದ ಬರುವ ಲಹರಿಗಳು ಹೆಚ್ಚು ಪ್ರಮಾಣದಲ್ಲಿ ನಾಶವಾಗುತ್ತವೆ; ಆದುದರಿಂದಲೇ ‘ಅಂಗಾರಕ ವಿನಾಯಕೀ’ ಮತ್ತು ‘ಅಂಗಾರಕ ಸಂಕಷ್ಟಿ’ಯ ಫಲವು ವರ್ಷಪೂರ್ತಿ ಮಾಡಿದ ಕ್ರಮವಾಗಿ ವಿನಾಯಕಿ ಮತ್ತು ಸಂಕಷ್ಟಿಗಳಷ್ಟೇ ಇರುತ್ತದೆ.
ದೇವರನ್ನು ಒಲಿಸಿಕೊಳ್ಳಲು ನಾವು ಆಚರಿಸುವ ಉಪವಾಸವು ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಸಕಾರಾತ್ಮಕ ಶಕ್ತಿಯನ್ನು, ಸಕಾರಾತ್ಮಕ ಚಿಂತನೆಯನ್ನು ಪಡೆದುಕೊಳ್ಳಲು ಸ್ವ ಇಚ್ಛೆಯಿಂದ ಊಟವನ್ನು ಅಥವಾ ಸಂಪೂರ್ಣ ಆಹಾರವನ್ನು ತ್ಯಾಗ ಮಾಡಿದರೆ ಅದು ಉಪವಾಸವಾಗುತ್ತದೆ. ಉಪವಾಸವು ಮನಸ್ಸನ್ನು ಮತ್ತು ದೇಹವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಉಪವಾಸದ ಸಮಯದಲ್ಲಿ ಓರ್ವ ವ್ಯಕ್ತಿಯು ತನ್ನನ್ನು ತಾನು ನಿಯಂತ್ರಿಸಿಕೊಳ್ಳುತ್ತಾನೆ ಇದರಿಂದ ಅವನಲ್ಲಿದ್ದ ನಕಾರಾತ್ಮಕ ಶಕ್ತಿಯು ದೂರಾಗುತ್ತದೆ.
ಸಂಕಷ್ಟಿದಿನ ಉಪವಾಸ ಮಾಡುವವರು ಯಾವುದೇ ಕಾರಣಕ್ಕೂ ಬೇಯಿಸಿದ ಆಹಾರ ಪದಾರ್ಥಗಳ ಸೇವನೆ ಮಾಡಬಾರದು..ಆರೋಗ್ಯ ಸಮಸ್ಯೆ ಇದ್ದವರು, ಉಪವಾಸದ ವೇಳೆ ಹಾಲು ಅಥವಾ ಎಳನೀರು ಸೇವನೆ ಮಾಡಬಹುದು.. ಸಂಜೆ ಚಂದ್ರನಿಗೆ ಅರ್ಘ್ಯ ಕೊಟ್ಟ ಬಳಿಕ ಉಪವಾಸ ವೃತ ಮುರಿಯುವುದರಿಂದ ಮಾಡಿದ ಪ್ರಾರ್ಥನೆ ಸಫಲವಾಗುತ್ತದೆ