ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕೆ ಇಳಿಯಲಿರುವ ಜೆಡಿಎಸ್ ಅಭ್ಯರ್ಥಿಗಳಿಗೆ ಸ್ವತಃ ಟಿಪ್ಸ್ ನೀಡಲು ಮುಂದಾದ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು; ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರೊಂದಿಗೆ ಎಲ್ಲಾ ಜಿಲ್ಲೆಗಳ ಹುರಿಯಾಳುಗಳ ಜತೆ ಮಹತ್ವದ ಚರ್ಚೆ ನಡೆಸಿದರು
ಜೆಡಿಎಸ್ ನ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಕೊನೆ ದಿನವಾದ ಇಂದು ಅಭ್ಯರ್ಥಿಗಳಿಗೆ ಚುನಾವಣಾ ಪಾಠ ಮಾಡಿದ ದಳಪತಿಗಳು; ಜಿಲ್ಲಾವಾರು ಕ್ಷೇತ್ರಗಳ ಅಭ್ಯರ್ಥಿಗಳ ಸಭೆ ನಡೆಸಿ, ಪ್ರತೀ ಅಭ್ಯರ್ಥಿಯ ಅಭಿಪ್ರಾಯ, ಮನವಿ ಆಲಿಸಿದರು. ಅಲ್ಲದೆ, ಅವರಿಗೆ ಖಡಕ್ಕಾಗಿ ಕೆಲ ಸಲಹೆಗಳನ್ನು ನೀಡಿದರು.
ಕ್ಷೇತ್ರಗಳಲ್ಲಿ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಉದ್ದೇಶ ಪಕ್ಷಕ್ಕೆ ಇದ್ದು, ಯಾವುದೇ ಕಾರಣಕ್ಕೂ ಸಮಸ್ಯೆ ಆಗಬಾರದು. ಸಮಸ್ಯೆ ಮಾಡುವ ಪ್ರವೃತ್ತಿಯನ್ನು ಸಹಿಸುವ ಪ್ರಶ್ನೆ ಇಲ್ಲ ಎಂದು ಎಚ್ಚರಿಕೆ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಉಡಾಫೆ ಮಾಡದೆ ಗೆಲುವಿನ ಕಡೆ ಹೆಚ್ಚು ಗಮನಹರಿಸುವಂತೆ ತೀಕ್ಷ್ಣವಾಗಿ ಹೇಳಿದರು.

ಎರಡನೇ ದಿನದ ಕಾರ್ಯಾಗಾರದಲ್ಲೂ ಹಾಲಿ ಶಾಸಕರು, ಮುಬರುವ ಚುನಾವಣೆ ಅಭ್ಯರ್ಥಿಗಳು ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷರಿಗೆ ಖಡಕ್ ಕ್ಲಾಸ್ ತೆಗೆದುಕೊಂಡ ಹೆಚ್ ಡಿಕೆ, ಪ್ರತಿಯೊಂದು ಕ್ಷೇತ್ರವೂ ಬಹಳ ಮುಖ್ಯ. ಗೆಲ್ಲುವ ಅವಕಾಶದಿಂದ ಕೈಚೆಲ್ಲಿ ಕೂರಬೇಡಿ ಎಂದು ನೀತಿ ಪಾಠ ಮಾಡಿದರು.
2023 ರ ವಿಧಾನಸಭೆ ಚುನಾವಣೆ ನಿರ್ಣಾಯಕವಾಗಿದ್ದು, ಯಾರೂ ಸಹ ನಿರ್ಲಕ್ಷ್ಯ ಮಾಡಬಾರದು. ನೋಡೋಣ, ಮಾಡೋಣ ಎಂಬ ಮಾತೇಇಲ್ಲ. ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದ್ದರೆ ಮಾತ್ರ ಬಿ ಫಾರಂ ಪಡೆದುಕೊಳ್ಳಿ. ಇಲ್ಲದಿದ್ದರೆ ಸುಖಾ ಸುಮ್ಮನೆ ಹಣ ಏಕೆ ನಷ್ಟ ಮಾಡಿಕೊಳ್ಳುತ್ತಿರಿ. ನನಗೆ ಚುನಾವಣಾ ಫಲಿತಾಂಶ ಮುಖ್ಯ ಎಂದು ನೇರ ನುಡಿಗಳಲ್ಲಿ ಸಲಹೆ ನೀಡಿದರು.
ಚುನಾವಣೆ ಗೆಲ್ಲಲು ಏನು ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ಕೇಳಿ ಮಾರ್ಗದರ್ಶನ ಮಾಡುತ್ತೇನೆ. ಆದರೆ, ಹುಡುಗಾಟಿಕೆ ಆಡುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದರು. ಕುಮಾರಸ್ವಾಮಿ ಅವರು ಕೊಡುವ ಸಲಹೆ ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸಿ ಎಂದು ದೇವೇಗೌಡರು ಸೂಚನೆ ಕೊಟ್ಟರು.
ಮುಖ್ಯವಾಗಿ ಚುನಾವಣೆಯಲ್ಲಿ ಗೆಲ್ಲುವ ಸೂತ್ರಗಳ ಬಗ್ಗೆ ಮಹತ್ವದ ಟಿಪ್ಸ್ ಕೊಟ್ಟ ಕುಮಾರಸ್ವಾಮಿ ಅವರು, ಪ್ರತಿಯೊಂದು ವಿಷಯವನ್ನು ಎಳೆ ಎಳೆಯಾಗಿ ಬಿಡಿಸಿ ನೂತನ ಅಭ್ಯರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಪ್ರಶೋತ್ತರ ಮತ್ತು ಪ್ರತ್ಯೇಕ ಚರ್ಚೆ:
ಇಂದಿನ ಕಾರ್ಯಾಗಾರದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಭಾಗವಹಿಸಿದ್ದು ವಿಶೇಷವಾಗಿತ್ತು. ಬೆಳಗ್ಗೆಯಿಂದ ಸಂಜೆವರೆಗೂ ಸಭೆಯಲ್ಲಿ ಪಾಲ್ಗೊಂಡಿದ್ದ ಗೌಡರು, ಪ್ರತಿ ಜಿಲ್ಲೆಯ ಆಯಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರತ್ಯೇಕವಾಗಿ ಮಾತನಾಡಿದ್ದು ಎಲ್ಲ ಅಭ್ಯರ್ಥಿಗಳಲ್ಲಿ ವಿದ್ಯುತ್ ಸಂಚಾರ ಉಂಟು ಮಾಡಿತು. ಅವರು ಪ್ರತಿಯೊಬ್ಬರಿಗೂ ಮಾರ್ಗದರ್ಶನ ಮಾಡಿದರು.
ಉಳಿದಂತೆ, ಮೈಸೂರಿನಲ್ಲಿ ಎರಡು ದಿನಗಳ ಕಾಲ ನಡೆದ ವಿಶೇಷ ಕಾರ್ಯಾಗಾರ ಯಶಸ್ವಿಯಾಗಿದೆ. ಬೆಂಗಳೂರಿನ ಬಿಡದಿಯ ಕೇತಗಾನಹಳ್ಳಿಯ ಕಾರ್ಯಾಗಾರದ ನಂತರ ಇದು ಎರಡನೇ ಕಾರ್ಯಗಾರವಾಗಿತ್ತು. ಈ ಕಾರ್ಯಾಗಾರದಲ್ಲಿ ಪ್ರಮುಖವಾಗಿ ಪಂಚರತ್ನ ರಥಯಾತ್ರೆ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡರು.
ನವೆಂಬರ್ 1ರಂದು ಪಂಚರತ್ನ ರಥಯಾತ್ರೆ ಮುಳಬಾಗಿಲು ತಾಲೂಕಿನಲ್ಲಿರುವ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಮಾಡುವ ಮೂಲಕ ಅಂದು ರಥಯಾತ್ರೆಗೆ ಚಾಲನೆ ನೀಡಲಾಗುತ್ತದೆ. ವೇದಿಕೆ ಮೇಲೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಇದ್ದರು.