ಮಹಾತ್ಮ ಗಾಂಧಿ ಅವರು ಬ್ರಿಟೀಷರನ್ನ ಭಾರತ ಬಿಟ್ಟು ತೊಲಗಿ ಎನ್ನುವ ಹೋರಾಟಕ್ಕೆ 81 ವರ್ಷ ಆಗಿದೆ. ಈಗ ಮತ್ತೆ 8 ದಶಕಗಳ ನಂತರ ಭಾರತ ಬಿಟ್ಟು ತೊಲಗಿ ಎನ್ನುವ ಹೋರಾಟ ಮತ್ತೆ ಆರಂಭವಾಗಿದೆ. ಅಂದು ಬ್ರಿಟೀಷರ ವಿರುದ್ದ ಹೋರಾಟ ಮಾಡಿದ್ದೆವು. ಇಂದು ಕೋಮುವಾದಿ, ಸರ್ವಾದಿಕಾರಿ ಸರ್ಕಾರ ತೊಲಗಿಸಲು ಹೋರಾಟ ಮಾಡಬೇಕಾಗಿದೆ. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಅಂತ ಈ ಹಿಂದೆ ಬಿಜೆಪಿ ಅವ್ರು ಹೇಳಿದ್ರು ಈಗ ನೀವೆಲ್ಲಾ ಬಿಜೆಪಿ ಮುಕ್ತ ಭಾರತಕ್ಕೆ ಸಜ್ಜಾಗಬೇಕು ಎಂದು ಕಾರ್ಯಕರ್ತರಿಗೆ ಡಿಸಿಎಂ ಕರೆ ನೀಡಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕ್ವಿಟ್ ಇಂಡಿಯಾ ಚಳವಳಿ ದಿನಾಚರಣೆಯಲ್ಲಿ ಮಾತನಾಡುತ್ತಾ, ಡಿಸಿಎಂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತದ ಎಲ್ಲಾ ರಾಜ್ಯಗಳ ಪ್ರಮುಖ ವಿರೋಧ ಪಕ್ಷಗಳ ನಾಯಕರು, ಮುಖ್ಯಮಂತ್ರಿಗಳು “ಇಂಡಿಯಾ ರಕ್ಷಿಸಿ” ಅಭಿಯಾನಕ್ಕೆ ಬೆಂಗಳೂರು ಸಾಕ್ಷಿಯಾಯಿತು. ಇಡೀ “ಇಂಡಿಯಾ”ಕ್ಕೆ ಕರ್ನಾಟಕ ಆತ್ಮವಿಶ್ವಾಸ ನೀಡಿದೆ.. “ಇಂಡಿಯಾ” ಸಭೆಯ ನಂತರ ನಮ್ಮ ಪಕ್ಷದ ಎಲ್ಲಾ ರಾಜ್ಯಗಳ ನಾಯಕರನ್ನು ಕರೆದ ಉನ್ನತ ನಾಯಕರುಗಳು ಕರ್ನಾಟಕ ಮಾದರಿಯನ್ನು ಅನುಕರಿಸಿ ಎಂದು ಹೇಳಿದರು.
ಕರ್ನಾಟಕ ಮಾದರಿ ಎಂದರೆ ಏನು? ಎಲ್ಲಾ ವೈಮನಸ್ಸು , ವ್ಯಕ್ತಿ ಪ್ರತಿಷ್ಠೆ ಬಿಟ್ಟು, ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ ಎಂದು ದುಡಿಯುವುದೇ ಕರ್ನಾಟಕ ಮಾದರಿ ಎಂದು ಕಿವಿ ಮಾತು ಹೇಳಿದ್ದಾರೆ, ಇದು ನಮ್ಮ ಹೆಗ್ಗಳಿಕೆ ಎಂದರು. ವಿಧಾನ ಸಭೆ ಎಲೆಕ್ಷನ್ ಅಲ್ಲಿ ಕಾಂಗ್ರೆಸ್ ಪಕ್ಷ 136 ಸ್ಥಾನ ಗೆಲ್ಲುತ್ತದೆ ಎಂದು ಹೇಳಿದ್ದೆ ಸುಮಾರು ಜನ ನಂಬಲಿಲ್ಲ, ವಿರೋಧ ಪಕ್ಷದವರು ಸಮ್ಮಿಶ್ರ ಸರ್ಕಾರ ಬಂದು ಬಿಡುತ್ತದೆ ಎಂದು ಮುಂಚಿತವಾಗಿಯೇ ಕಾಲಿಗೆ ಬಿದ್ದು ಸರ್ಕಾರ ಮಾಡೋಕೆ ತಯಾರಾಗಿದ್ದರು. ಆದರೆ ನನ್ನ ನಂಬಿಕೆ ಸುಳ್ಳಾಗಲಿಲ್ಲ.
ಯಾರೋ ನಾಯಕರೊಬ್ಬರು ಹೇಳ್ತಾ ಇದ್ದರು ನಾನು ಮಾಟ ಮಂತ್ರ ಮಾಡಿದ್ದೇನೆ ಎಂದು, ಕಾರಣ ಮಾಟಮಂತ್ರವಲ್ಲ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಬೆಳಗಾವಿಯ ಕಾಂಗ್ರೆಸ್ ಬಾವಿ ಬಳಿ ಪ್ರಜಾಧ್ವನಿ ಯಾತ್ರೆ ಪ್ರಾರಂಭ ಮಾಡಿದ್ದೆವು, ಆ ಬಾವಿಯ ನೀರಿನಿಂದ ರಸ್ತೆ ಸ್ವಚ್ಚಗೊಳಿಸಿ ಈ ರಾಜ್ಯಕ್ಕೆ ಅಂಟಿರುವ ದರಿದ್ರ ಕೊಳೆ ಹೋಗಲಿ ಎಂದು ಕೆಲಸ ಪ್ರಾರಂಭ ಮಾಡಿದೆವು ಅದರಂತೆ ಬದಲಾವಣೆ ಆಯಿತು ಅಂತ ಕಿಡಿ ಕಾರಿದ್ರು.
ರಾಜೀವ್ ಗಾಂಧಿ ಅವರ ಜನ್ಮ ದಿನದಂದು ಗೃಹಲಕ್ಷ್ಮಿ
ಆಗಸ್ಟ್ 20 ನೇ ತಾರೀಕು ಪ್ರತಿಯೊಂದು ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿ, ಮಟ್ಟದಲ್ಲಿ, ಮಹಾನಗರ ಪಾಲಿಕೆಯ ವಾರ್ಡ್ ಮಟ್ಟದಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳನ್ನು ಸೇರಿಸಿ ಪಕ್ಷಾತೀತವಾಗಿ ಸಂಭ್ರಮಾಚರಣೆ ಮಾಡುವಂತೆ ಸೂಚಿಸಿದ್ಧೇವೆ. 1 ಕೋಟಿ 28 ಲಕ್ಷ ಮಹಿಳೆಯರ ಅರ್ಜಿಯನ್ನು ಪರಿಗಣಿಸಿದ್ದೇವೆ.
ಈ ವೇಳೆ ಲೋಕಸಭಾ ಚುನಾವಣೆಯ ಬಗ್ಗೆ ಕೂಡ ಡಿಸಿಎಂ ಮಾತನಾಡಿದರು.
ಬಿಜೆಪಿ, ಜೆಡಿಎಸ್ ಮತದಾರರ ಹೃದಯ ಗೆಲ್ಲಬೇಕು: ಮುಂದೆ ಲೋಕಸಭಾ ಚುನಾವಣೆ ಇದೆ. ನಮ್ಮ ಯೋಜನೆಗಳ ಲಾಭವನ್ನು ಬಿಜೆಪಿ ಮತದಾರರೂ ಪಡೆಯುತ್ತಿದ್ದಾರೆ. ಅಂತಹವರ ಹೃದಯ ಗೆಲ್ಲಬೇಕು, ಕರ್ನಾಟಕದಲ್ಲಿ ದ್ವೇಷ, ಅಸೂಯೆ ರಾಜಕಾರಣಕ್ಕೆ ಅವಕಾಶವಿಲ್ಲ, ಎಲ್ಲರೂ ನಮ್ಮವರೇ, ಆ ನಿಟ್ಟಿನಲ್ಲಿ ಎಲ್ಲಾ ನಾಯಕರು, ಕಾರ್ಯಕರ್ತರು ಕೆಲಸ ಮಾಡಬೇಕು. ನಮ್ಮ ಗುರಿ ಕೇವಲ 2024 ಮಾತ್ರವಲ್ಲ 2028 ಕೂಡ ಇರಬೇಕು ಅಂತ ಕಾರ್ಯಕರ್ತರಲ್ಲಿ ಆತ್ಮ ವಿಶ್ವದ ತುಂಬಿದರು.
ಇನ್ನೂ ನಿಗಮ ಮಂಡಳಿ ಸ್ಥಾನದ ಬಗ್ಗೆ ಕೂಡ ಡಿಸಿಎಂ ಮಾತನಾಡಿದ್ದು, ಪಕ್ಷಕ್ಕಾಗಿ ದುಡಿದವರಿಗೆ ಮಾತ್ರ ಸ್ಥಾನ ಕೊಡಲಾಗುತ್ತದೆ. ನಿಗಮ ಮಂಡಳಿ ಸೇರಿದಂತೆ ಇತರೇ ಅಧ್ಯಕ್ಷ, ಸದಸ್ಯ ಸ್ಥಾನಗಳಿಗೆ ಯಾರ್ಯಾರನ್ನೋ ನೇಮಕ ಮಾಡುವುದಿಲ್ಲ, ಯಾವ ನಾಯಕರು ಪಕ್ಷಕ್ಕಾಗಿ ದುಡಿದಿದ್ದಾರೋ ಅವರಿಗೆ ಮೊದಲ ಆದ್ಯತೆ ಜೊತೆಗೆ ರಂದೀಪ್ ಸುರ್ಜೇವಾಲ ಅವರು ಸೂಚನೆ ನೀಡಿದ್ದಾರೆ ಬೂತ್ ಮಟ್ಟದಲ್ಲಿ ಎಷ್ಟು ಮತಗಳನ್ನು ಪಕ್ಷಕ್ಕೆ ತಂದಿದ್ದಾರೋ ಅಂತಹ ನಾಯಕರಿಗೆ ಮೊದಲು ಪ್ರಾಶಸ್ತ್ಯ ನೀಡಿ ಎಂದಿದ್ದಾರೆ ಅದರಂತೆ ನಡೆಯುತ್ತೇವೆ.
ಕೊರೊನಾ ಸಮಯದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸಿ, ತಳಮಟ್ಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಜನರ ಸೇವೆಗೆ ಕಳುಹಿಸಿ ಜೀವ ಒತ್ತೆ ಇಟ್ಟು ಪಕ್ಷ ಕಟ್ಟಿದ್ದೇವೆ. ಸ್ವಾತಂತ್ರ್ಯ ಅಮೃತ ಮಹೋತ್ಸವ, ಮೇಕೆದಾಟು ಪಾದಯಾತ್ರೆ ರಾಜ್ಯದ ಇತಿಹಾಸದಲ್ಲಿ ದಾಖಲಾಗುವಂತಹ ಸಂಗತಿಗಳು, ಭಾರತ್ ಜೋಡೋ ಸಂದರ್ಭದಲ್ಲಿ ಬದನವಾಳುವಿನಲ್ಲಿ ಸವರ್ಣೀಯರು ಮತ್ತು ದಲಿತರ ಮದ್ಯೆ ಇದ್ದಂತಹ ಕಂದಕವನ್ನು ಮುಚ್ಚಿದ್ದೇವೆ ಇದು ಕಾಂಗ್ರೆಸ್ ಪಕ್ಷದ ಸಾಧನೆ ಅಂತ ಎದೆ ತಟ್ಟಿ ಹೇಳಿದರು.